ರಾಷ್ಟ್ರೀಯ ವಿಷಮತೆ

ಉದುರುತಿವೆ ಹಣ್ಣೆಲೆಗಳೊಂದಾದ ಮೇಲೊಂದು;
ಬಂದಂತೆ ತೋರುತಿದೆ ನಮ್ಮ ನಾಡಿಗೆ ಮಾಗಿ.
ಹೆಪ್ಪುಗಡುತಿಹುದೆದೆಯ ಕೆನ್ನೀರು ಚಳಿ ತಾಗಿ;
ಸುಕ್ಕು ತೋರುತಿದೆ ಮುಖದಲ್ಲಿ. ಕುಳಿರಲಿ ಮಿಂದು
ಯುವಕ ತರು ವೃಂದವೂ ಮೃತವಾದವೊಲು ನಿಂದು
ಆಸೆಗೆ ನಿರಾಸೆಯನೆ ನೀಡುತಿದೆ. ಚಳಿ ಹೋಗಿ,
ಬಿಸಿಯ ಬಿಸಿಲೈತಂದು, ಮುದದಿ ಕೋಗಿಲೆ ಕೂಗಿ,
ಮೃದುಲ ಪಲ್ಲವ ನವ್ಯ ದಿವ್ಯಚೇತನ ಸಿಂಧು
ಮಧು ಮಹಾತ್ಮನು ತಾನು ಎಂದಿಗೈತಂದೆಮಗೆ
ಮತ್ತೆ ಮೊದಲಿನ ನೆಚ್ಚು ಕೆಚ್ಚುಗಳನೆದೆಗಿತ್ತು
ಸಲಹುವನೊ ಎಂದಳುಕಿ, ಬೇಸತ್ತು ತಮತಮಗೆ
ಉತ್ಸಾಹ ಹೀನರಾಗದಿರಿ: ಏಕೆನೆ, ಬಿತ್ತು
ಲಯವಾಗುವುದೆ ಮೊಳಕೆಗಾಯುಸ್ಸು. ಮುನ್ನುಗ್ಗಿ,
ತಳಿರುಗಳೆ, ಕಾಯುತಿದೆ ನಿಮಗಾಗಿ ಹೊಸಸುಗ್ಗಿ!

                                   -  ಕುವೆಂಪು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....